ಶನಿವಾರ, ನವೆಂಬರ್ 1, 2008

ಪತ್ರಿಕೆಯ ನಡೆ ಸ್ಪೂರ್ತಿಯಾಗಲಿ

`ಮುಂದೆ ಹೋಗೋಣ ಮಂಗಳೂರು' ಆಕರ್ಷಕ ಅಂಕಣದ ಮೂಲಕ ಮಂಗಳೂರು ಮಹಾನಗರದ ಸಮಗ್ರ ಅಭಿವೃದ್ಧಿಗೆ ಆಡಳಿತ ವರ್ಗವನ್ನು ಮತ್ತು ಜನತೆಯನ್ನು ಸಜ್ಜುಗೊಳಿಸುವ ವಿಜಯಕರ್ನಾಟಕದ ಬಗ್ಗೆ ಮೆಚ್ಚುಗೆಯುಂಟಾಯಿತು. ಪತ್ರಿಕೆಯೆಂಬುದು ಜನರ ಧ್ವನಿ. ಜನರನ್ನೂ ಸೇರಿಸಿಕೊಂಡು ವಿಜಯಕರ್ನಾಟಕ ನಡೆಸುತ್ತಿರುವ ಇಂತಹ ಅಭಿವೃದ್ಧಿಪರ ಅಭಿಯಾನಗಳು ಖಂಡಿತ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ಪತ್ರಿಕೆ ಹಾಗೂ ಓದುಗರೊಂದಿಗೆ ಒಂದು ವಿಶೇಷ ಸಂಬಂದ ಸೃಷ್ಟಿಯಾಗಲೂ ಈ ಹೊಸ ಅಭಿಯಾನ ಪ್ರೇರಣೆಯಾಗಬಹುದು. ದಿನೇ ದಿನೇ ಅಭಿವೃದ್ಧಿಯ ಉನ್ನತ ಶಿಖರದತ್ತ ನೆಗೆಯುತ್ತಿರುವ ಮಂಗಳೂರು ನಗರವನ್ನು ಸಂಪೂರ್ಣ ಶುಚಿಯಾಗಿಡುವ ಮೂಲಕ ಸ್ವಚ್ಛ ನಗರವನ್ನಾಗಿ ಪರಿವರ್ತಿಸಲು ಜಿಲ್ಲಾಡಳಿತಕ್ಕೆ ವಿಜಯಕರ್ನಾಟಕದ ನಡೆ ಸೂರ್ತಿಯಾದರೆ ಇದರ ಹಿಂದಿರುವ ಪತ್ರಿಕಾ ಮಂಡಳಿಯ ಶ್ರಮ ಸಾರ್ಥಕ. ವಿಜಯ ಕರ್ನಾಟಕದ ಹೊಸ ಅಭಿಯಾನದೊಂದಿಗೆ ಓದುಗರಾದ ನಾವೂ ಕೈಜೋಡಿಸೋಣ.
ಕೆ. ಎ. ಅಬ್ದುಲ್ ಅಝೀಝ್ ಝಹ್‌ರಿ, ಪುಣಚ.
ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಝಹ್‌ರೀಸ್ ಅಸೋಸಿಯೇಶನ್.

ಬೆಂಗಳೂರಿಗೆ ನೇರ ರೈಲು, ಕೊಣಾಜೆಗೆ ನೇರ ರಸ್ತೆ ಬೇಕು
ಮಂಗಳೂರು ಕರ್ನಾಟಕದ ವಾಣಿಜ್ಯ ನಗರವಾಗಿದ್ದು, ಇದನ್ನು ರಾಜ್ಯದ ಪಶ್ಚಿಮ ಹೆಬ್ಬಾಗಿಲು ಎನ್ನಬಹುದು.ದೇಶದ ಪ್ರಮುಖ ನಗರಗಳು ಹಾಗೂ ಹೊರದೇಶಗಳಿಗೆ ಇಲ್ಲಿಂದ ನಿತ್ಯ ನೇರ ವಿಮಾನಯಾನವಿದೆ. ಮಂಗಳೂರು ಬೆಳೆಯುತ್ತಿರುವ ಬಂದರು. ಇದರ ಬೆಳವಣಿಗೆ ನಾಗಾಲೋಟ. ಇಲ್ಲಿಂದ ೮೮೦ ಕಿ.ಮೀ ದೂರದ ತಮಿಳುನಾಡಿನ ರಾಜಧಾನಿ ಚೆನ್ನೈಗೆ, ೬೬೦ ಕಿ.ಮೀ ದೂರದ ಕೇರಳದ ರಾಜಧಾನಿ ತಿರುವನಂತಪುರಕ್ಕೆ ನೇರ ರೈಲುಗಳು ಓಡುತ್ತವೆ. ಹಾಗೆಯೇ ಮಹಾರಾಷ್ಟ್ರ ರಾಧಾನಿ ಮುಂಬಯಿ ಮತ್ತು ಗೋವಾದ ಮಡಗಾಂವ್‌ಗೂ ನೇರ ರೈಲುಯಾನಗಳಿವೆ.
ಆದರೆ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಇಲ್ಲಿಂದ ನೇರ ರೈಲು ಸಂಪರ್ಕವಿಲ್ಲದಿರುವುದು ವಿಪರ್ಯಾಸ. ಇರುವ ಒಂದು ರೈಲು ಹಾಸನ-ಮೈಸೂರಿಗಾಗಿ ಸುತ್ತಿಬಳಸಿ ಬೆಂಗಳೂರು ತಲುಪುತ್ತದೆ. ಈ ದಾರಿಯ ಪ್ರಯಾಣದ ವೆಚ್ಚವೂ ಹೆಚ್ಚು. ಸಮಯವೂ ಜಾಸ್ತಿ. ಬದಲಾಗಿ ಒಂದು ರೈಲು ಅರಸೀಕೆರೆ ಮಾರ್ಗವಾಗಿ ಬೆಂಗಳೂರಿಗೆ ಓಡಿಸಿದರೆ ಹೆಚ್ಚು ಅನುಕೂಲ. ಪ್ರಯಾಣದ ಸಮಯವೂ ಕಡಿಮೆ, ವೆಚ್ಚವೂ ಕಡಿಮೆ. ಅಲ್ಲದೆ ಈ ಮಾರ್ಗ ಬೆಂಗಳೂರು ಮತ್ತು ಹುಬ್ಬಳ್ಳಿ ಕಡೆಗೆ ಪ್ರಯಾಣಿಸುವವರಿಗೆ ತುಂಬಾ ಅನುಕೂಲ. ಆ ಕಡೆಯ ಉತ್ಪನ್ನಗಳಿಗೆ ಮಂಗಳೂರು ಒಂದು ಮಾರುಕಟ್ಟೆ ಮಾತ್ರವಲ್ಲ, ಬಂದರು ಮೂಲಕ ಸಾಗಾಣಿಕೆಗೆ ರಹದಾರಿ. ಹೀಗಾಗಿ ಮಂಗಳೂರು-ಬೆಂಗಳೂರು ನಡುವೆ ಇನ್ನೂ ಹೆಚ್ಚು ರೈಲುಗಳ ಓಡಾಟಕ್ಕೆ ಸಂಬಂಧಪಟ್ಟ ಅಕಾರವುಳ್ಳವರು ಪ್ರಯತ್ನಿಸಬೇಕು.
ಮಂಗಳೂರು ವಿಶ್ವವಿದ್ಯಾಲಯ ನಗರದಿಂದ ದೂರದಲ್ಲಿದೆ. ಈ ದೂರವನ್ನು ಕಡಿಮೆ ಮಾಡಲು ಅಡ್ಯಾರ್‌ನಲ್ಲಿ ನೇತ್ರಾವತಿಗೆ ಒಂದು ಸೇತುವೆ ನಿರ್ಮಾಣವಾಗಬೇಕು. ಇದರಿಂದ ಈ ದೂರ ಅರ್ಧದಷ್ಟು ಕಡಿಮೆಯಾಗುತ್ತದೆ. ಅಲ್ಲದೆ ಯುನಿವರ್ಸಿಟಿಯ ಸುತ್ತಮುತ್ತ ಇರುವ ಮೆಡಿಕಲ್, ಎಂಜಿನಿಯರಿಂಗ್, ದಂತವೈದ್ಯ ಕಾಲೇಜುಗಳು ಮಂಗಳೂರಿಗೆ ಹತ್ತಿರವಾಗುತ್ತವೆ. ಕೊಣಾಜೆಯಲ್ಲಿರುವ ಕೇಂದ್ರ ಮೀಸಲು ಪೊಲೀಸ್ ಪಡೆ ಕೇಂದ್ರವೂ ಹತ್ತಿರವಾಗುತ್ತದೆ. ಮುಂದೆ ಮಂಗಳೂರಿನ ಕೆಲವು ವರ್ಗದ ಜನರು ವಸತಿಗಾಗಿ ಈ ಪ್ರದೇಶಕ್ಕೆ ಬರಬಹುದು.

-ಬಿ. ಬಾಬು
ಪಿಂಚಣಿದಾರ
ಶಿವಪೇಟೆ, ಪುತ್ತೂರು.

ಕಾಮೆಂಟ್‌ಗಳಿಲ್ಲ: