ಮುನ್ನಡೆಗೆ ನಿಮ್ಮ ಕೊಡುಗೆ
೧೩-೧೦-೨೦೦೮ರಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಸಂಪಾದಕೀಯ
ಮಂಗಳೂರು ಇಂದು ದೇಶದ ನಕಾಶೆಯಲ್ಲಿ ಕಂಗೊಳಿಸುತ್ತಿರುವ ಕರಾವಳಿ ಪ್ರದೇಶ. ದಕ್ಷಿಣ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜಧಾನಿಯೇತರ ಮಹಾನಗರ. ಮಂಗಳೂರಿಗೆ ಇನ್ನೊಂದು ಬೆಂಗಳೂರಾಗಿ ರೂಪುಗೊಳ್ಳುವ ಅಥವಾ ಅದಕ್ಕಿಂತ ದೊಡ್ಡದಾಗಿ ಬೆಳೆಯುವ ಎಲ್ಲಾ ಸಾಮರ್ಥ್ಯವೂ ಇದೆ. ಪ್ರವರ್ಧಮಾನಗೊಳ್ಳುತ್ತಿರುವ ಐಟಿ ಉದ್ಯಮ, ಅಂತಾರಾಷ್ಟ್ರೀಯ ಪ್ರತಿಭೆಗಳ ಮಹಾಪೂರ, ಉತ್ಕೃಷ್ಟ ವೈದ್ಯಕೀಯ ಸೌಲಭ್ಯಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ಹೇರಳ ಬಂದರು ಸಂಪನ್ಮೂಲಗಳು, ಧಾರಾಳ ಪ್ರವಾಸೋದ್ಯಮ ಸದವಕಾಶಗಳು, ಬ್ಯಾಂಕಿಂಗ್ ಹೋಟೇಲ್ಗಳ ತವರೂರಲ್ಲಿ ಏನುಂಟು ಏನಿಲ್ಲ? ಇಲ್ಲಿ ಎಲ್ಲವೂ ಪುಷ್ಕಳ ಎಲ್ಲವೂ ಸಮೃದ್ಧ.
ಹಾಗಾದರೆ ನಮ್ಮನ್ನು ತಡೆಯುತ್ತಿರುವುದೇನು?
ದುರದೃಷ್ಟವಶಾತ್, ಮಂಗಳೂರು ಇತ್ತೀಚಿನ ದಿನಗಳಲ್ಲಿ ಬೇರೆಯದೇ ಕಾರಣಗಳಿಗಾಗಿ ದೇಶದ ಗಮನ ಸೆಳೆಯುತ್ತಿದೆ. ನಮ್ಮದೇ ನಾಡನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬೇಕಾದ ನಾವು ಪರಸ್ಪರ ಅಪನಂಬುಗೆಯ ಕಾದಾಟದಲ್ಲಿ ಸಮಯ ಪೋಲು ಮಾಡುತ್ತಿದ್ದೇವೆ. ಈ ಗದ್ದಲ ಈ ಗೊಂದಲ ಈ ಗಲಿಬಲಿಗಳಿಗೆಲ್ಲ ಇನ್ನು ಪೂರ್ಣ ವಿರಾಮ ಬೀಳಬೇಕಾಗಿದೆ.
ನಮ್ಮ ಮಂಗಳೂರನ್ನು ನಾವಲ್ಲದೆ ಇನ್ನಾರು ಮುನ್ನಡೆಸಲು ಸಾಧ್ಯ?
ಈ ಭಾಗದ ಅಭಿವೃದ್ಧಿ ಅಜೆಂಡಾ ಮುಂದಿಟ್ಟು ವಿಜಯ ಕರ್ನಾಟಕ ನಿರಂತರವಾಗಿ ಸರಕಾರದ ಗಮನ ಸೆಳೆಯುತ್ತಲೇ ಬಂದಿದೆ. ಅದಕ್ಕೊಂದು ಸಮಗ್ರತೆ ಮತ್ತು ತಾರ್ಕಿಕ ಅಂತ್ಯ ಕೊಡುವ ನಿಟ್ಟಿನಲ್ಲಿ ಇದೊಂದು ನಮ್ಮ ಪ್ರಾಮಾಣಿಕ ಪ್ರಯತ್ನ. ಇದಕ್ಕೆ ನಿಮ್ಮ ಕೊಡುಗೆಯೇ ಮುಖ್ಯವಾಗುತ್ತದೆ. ಹೊಸದಾಗಿ ಬಂದ ಸರಕಾರವೂ ಕರಾವಳಿ ಅಭಿವೃದ್ಧಿಯ ಉತ್ಸಾಹ ತೋರಿಸುತ್ತಿರುವುದು ಉತ್ತಮ ಬೆಳವಣಿಗೆ. ಆದರೆ ಎಲ್ಲೋ ಒಂದು ಕಡೆ ಇದು ಆರಂಭ ಶೂರತ್ವ ಆಗುವ ಆತಂಕವೂ ಇದೆ. ಹಾಗೆಂದು ಕೈ ಕಟ್ಟಿ ಕುಳಿತರೆ ಬದಲಾವಣೆ ತನ್ನಿಂತಾನೆ ಆಗುವುದಿಲ್ಲ. ಬನ್ನಿ ನಮ್ಮೆಲ್ಲ ವೈಮನಸ್ಸುಗಳನ್ನು ಬದಿಗೊತ್ತಿ ಮಂಗಳೂರಿನ ಮುನ್ನಡೆಯ ಚಿಂತನೆ ಮಾಡೋಣ. ಸರಕಾರ ನಮಗಾಗಿ ಏನು ಮಾಡಬೇಕು ಎನ್ನುವುದನ್ನು ಹೇಳೋಣ.
ಇದಕ್ಕಾಗಿ `ವಿಜಯ ಕರ್ನಾಟಕ' ಸೃಷ್ಟಿಸುತ್ತಿರುವ ವೇದಿಕೆಯೇ `ಮುಂದೆ ಹೋಗೋಣ ಮಂಗಳೂರು'. ಇಲ್ಲಿ ಆಶಯ ನಮ್ಮೆಲ್ಲರದು. ಈ ಆಶಯಗಳನ್ನು ಈಡೇರಿಸುವ ಹೊಣೆಗಾರಿಕೆ ಮಾತ್ರ ಸರಕಾರದ್ದು. ವಿಜಯ ಕರ್ನಾಟಕದ ಈ ಮಹತ್ವಾಕಾಂಕ್ಷಿ ಮಾಲಿಕೆಯ ಹಿಂದೆ ಜನರಿಂದ ಬಂದ ಸರಕಾರ ಜನರಿಗಾಗಿ ಕೆಲಸ ಮಾಡಲು ಪ್ರೇರಕ ಶಕ್ತಿಯಾಗಬೇಕು ಎನ್ನುವ ಆಶಯ ಇದೆ. ಮಂಗಳೂರಿನ ಮೂಲಸೌಕರ್ಯ ಅಭಿವೃದ್ಧಿ, ಸ್ವಾಸ್ತ್ಯ, ಶಿಕ್ಷಣ, ಕೈಗಾರಿಕೆ, ಮೀನುಗಾರಿಕೆ, ಪ್ರವಾಸೋದ್ಯಮ, ಉದ್ಯಮ ಕ್ಷೇತ್ರಗಳಲ್ಲಿನ ಸಮಸ್ಯೆಗಳು, ನಕ್ಸಲ್, ಭಯೋತ್ಪಾದನೆಯ ಪಿಡುಗು ಮತ್ತು ಸೌಹಾರ್ದತೆ-ಸುಭದ್ರತೆ ಬಗ್ಗೆ ಸರಕಾರದ ಗಮನ ಸೆಳೆಯುವುದು ಇದರ ಉದ್ದೇಶ.
ಹಾಗೆ ನೋಡಿದರೆ ಇದೆಲ್ಲ ನಿಮ್ಮದೇ ಹಕ್ಕೊತ್ತಾಯ. ಇಲ್ಲಿ ನಮ್ಮ ಕೆಲಸ ಕಡಿಮೆ. ಇಲ್ಲೇನಿದ್ದರೂ ನಿಮ್ಮ ಧ್ವನಿಯೇ ಕೇಳಬೇಕು. ನಿಮ್ಮ ಅಹವಾಲು ವಿಧಾನಸೌಧದ ಬಾಗಿಲು ತಟ್ಟಬೇಕು. ಇದನ್ನು ಆಧರಿಸಿ ಮಂಗಳೂರಿನ ಸಮೃದ್ಧಿಗೆ ಸರಕಾರದಿಂದ ಸ್ಪಷ್ಟ ಯೋಜನೆಗಳು ರೂಪುಗೊಳ್ಳಬೇಕು ಎನ್ನುವುದು ನಮ್ಮ ಒತ್ತಾಸೆ. ಮಂಗಳೂರಿನ ಪ್ರಮುಖ ಸಮಸ್ಯೆಗಳು ಮತ್ತು ಅವುಗಳ ನಿವಾರಣೆಗೆ ಸರಕಾರಕ್ಕೆ ಮಾರ್ಗದರ್ಶಿ ಆಗಬಲ್ಲ ಸಮಗ್ರ ವರದಿಗಳು ಹತ್ತು ದಿನಗಳ ಪರ್ಯಂತ ಪ್ರಕಟವಾಗಲಿದೆ. ನೀವೂ ನಮ್ಮೊಂದಿಗೆ ಕೈ ಜೋಡಿಸಿ. ಸರಣಿ ಮುಗಿದ ಬಳಿಕ ಇವುಗಳನ್ನು ಖುದ್ದಾಗಿ ಸರಕಾರದ ಮುಂದಿಟ್ಟು ಸ್ಪಷ್ಟ ಉತ್ತರ ಪಡೆಯುವುದು ನಮ್ಮ ಜವಾಬ್ದಾರಿ. ಇಷ್ಟೇ ಅಲ್ಲ, ಕಾಲಕಾಲಕ್ಕೆ ಸರಕಾರ ಈ ಸಮಸ್ಯೆಗಳ ನಿವಾರಣೆಗೆ ಏನು ಮಾಡಿತು? ಎಂದು ಪ್ರಶ್ನಿಸುವ ಹೊಣೆಗಾರಿಕೆಯನ್ನೂ ನಾವು ಹೊರುತ್ತಿದ್ದೇವೆ. ಮಂಗಳೂರಿನ ಮುನ್ನಡೆಗೆ ಇದೊಂದು ವಿಜಯ ಕರ್ನಾಟಕದ ನಡೆ.
ಬನ್ನಿ, ನಾವೆಲ್ಲರೂ ಸೇರಿ ಮಂಗಳೂರನ್ನು ಬದಲಾಯಿಸೋಣ. ಉತ್ತಮ ಮಂಗಳೂರಿನ ನಿರ್ಮಾಣಕ್ಕಾಗಿ, ನಿಮ್ಮ ಅಮೂಲ್ಯವಾದ ಸಲಹೆ ಹಾಗೂ ಪರಿಹಾರ ಸೂತ್ರಗಳನ್ನು ನಮಗೆ ಕಳುಹಿಸಿ. ಮುಂದೆ ಹೋಗೋಣ ಮಂಗಳೂರು.
-ಸಂಪಾದಕ
ಶನಿವಾರ, ಅಕ್ಟೋಬರ್ 18, 2008
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ