ಬನ್ನಿ ನಮ್ಮ ಜತೆ ಕೈ ಜೋಡಿಸಿ
೧೪-೧೦-೨೦೦೮ರಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಸಂಪಾದಕೀಯ
ನಮ್ಮ ಮಂಗಳೂರನ್ನು ನಾವಲ್ಲದೆ ಇನ್ನಾರು ಮುನ್ನಡೆಸಲು ಸಾಧ್ಯ?
ಬನ್ನಿ, ನಾವೆಲ್ಲರೂ ಸೇರಿ ಮಂಗಳೂರನ್ನು ಬದಲಾಯಿಸೋಣ. ಉತ್ತಮ ಮಂಗಳೂರಿನ ನಿರ್ಮಾಣಕ್ಕಾಗಿ, ನಿಮ್ಮ ಅಮೂಲ್ಯವಾದ ಸಲಹೆ ಹಾಗೂ ಪರಿಹಾರ ಸೂತ್ರಗಳನ್ನು ನಮಗೆ ಕಳುಹಿಸಿ. ಮಂಗಳೂರಿನ ಮುನ್ನಡೆಗೆ ವಿಜಯ ಕರ್ನಾಟಕದ ನಡೆ.
`ವಿಜಯ ಕರ್ನಾಟಕ'ದ ಕರೆಗೆ ಕರಾವಳಿಯ ಪ್ರಜ್ಞಾವಂತರು ಯಾವ ಪರಿ ಪ್ರತಿಕ್ರಿಯಿಸಲಾರಂಭಿಸಿದ್ದಾರೆಂದರೆ, ನಮ್ಮ ಫೋನ್, ಫ್ಯಾಕ್ಸ್, ಈ ಮೇಲ್ಗಳೆಲ್ಲ ಫುಲ್ ಎಂಗೇಜ್!
ಓದುಗರ ಸ್ಪಂದನವೆಂದರೇ ಹಾಗೆ. ಪತ್ರಿಕೆಯ ಮೇಲಿನ ನಿಮ್ಮ ಅಭಿಮಾನವೋ, ನೀವಿಟ್ಟಿರುವ ವಿಶ್ವಾಸವೋ, ಜನಮುಖಿ ಆಂದೋಲನಕ್ಕೆ ಬೆಂಬಲವೋ... ಅಂತೂ ಅದನ್ನು ಒಂದು ಪದದಲ್ಲಿ ವ್ಯಾಖ್ಯಾನಿಸಲಾಗುವುದಿಲ್ಲ. ನಮ್ಮ ಒಂದೊಂದು ಪ್ರಯತ್ನವನ್ನೂ ಅಷ್ಟೇ ಬೆರಗಿನಿಂದ ನೀವು ಸ್ವೀಕರಿಸುವ ಪ್ರೀತಿಯಿದೆಯಲ್ಲ. ಅದಕ್ಕೆ ಈ ವರೆಗೆ ಬೇರೆ ಸಾಟಿ ಸಿಕ್ಕಿಲ್ಲ.
ಈ ಬಾರಿಯೂ ಅದೇ ಪುನರಾವರ್ತನೆ.
ಹೌದು, ಸರಕಾರದ ಮುಂದೆ ನಾವು ಇಡುತ್ತಿರುವ `ಮುಂದೆ ಹೋಗೋಣ ಮಂಗಳೂರು' ಲೇಖನ ಸರಣಿಗೆ ಹಿಂದೆಂದೂ ಕಂಡರಿಯದ ರೀತಿಯ ಬೆಂಬಲ ವ್ಯಕ್ತವಾಗಿದೆ. ಮಂಗಳೂರು ಅಭಿವೃದ್ಧಿ ಬಗೆಗಿನ ಜನರ ನಿರೀಕ್ಷೆಗಳು ಅಷ್ಟಿರಬಹುದು. ಮಂಗಳೂರನ್ನು ಕಾಡುತ್ತಿರುವ ಸಮಸ್ಯೆಗಳು ಅಷ್ಟು ಗಾತ್ರದ್ದಿರಲೂಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿರುವ ಮೌಲ್ಯವನ್ನು ಸಾಬೀತುಪಡಿಸುವ ಹಂಬಲವೂ ಆಗಿರಬಹುದು. ಒಟ್ಟಾರೆ ಕರಾವಳಿ ಜನತೆಯ ಆಶಯ ಬೆಟ್ಟದಷ್ಟಿದೆ ಎಂಬುದಂತೂ ಸತ್ಯ.
ಅಂಥ ಆಶಯಗಳು ನಮ್ಮದೂ ಆಗಿವೆ. ಜವಾಬ್ದಾರಿಯುತ ಮಾಧ್ಯಮವಾಗಿ ಪ್ರಜೆಗಳ ಮನದಿಂಗಿತವನ್ನು ಪ್ರಭುತ್ವಕ್ಕೆ ತಲುಪಿಸುವ ಹೊಣೆಯ ಭಾಗವೇ ಈ ಸರಣಿ. ನಿರಂತರ ಹತ್ತು ದಿನ ಪ್ರಕಟವಾಗುವ ಪೂರ್ಣ ಪುಟದ ಈ ಸರಣಿಯಲ್ಲಿ ನಿಮ್ಮ ಆಶಯಗಳನ್ನು ಹೊಸ ಸರಕಾರಕ್ಕೆ ತಲುಪಿಸುವ, ಅದಕ್ಕೊಂದು ಉತ್ತರ ದೊರಕಿಸಿಕೊಡುವ ಗುರಿ ನಮ್ಮದು.
ಇದಕ್ಕಾಗಿಯೇ ಮಂಗಳೂರನ್ನು ಸುದೀರ್ಘ ಕಾಲದಿಂದ ಕಾಡುತ್ತಿರುವ ಸಂಕಷ್ಟಗಳ ಪಟ್ಟಿ ಮಾಡಲಾರಂಭಿಸಿದ್ದೇವೆ. ಸಮಸ್ಯೆಗಳು ನೂರಾರು. ಸಮಾಜವೆಂದ ಮೇಲೆ ಅದು ಸಹಜ. ಅದರಲ್ಲೂ ತುರ್ತಾಗಿ ಆಗಲೇಬೇಕಾದದ್ದು ಕೆಲವಿರಬಹುದು. ಅಂಥ ತುರ್ತುಗಳ ಬಗ್ಗೆ ಆಡಳಿತ, ಅಕಾರಶಾಹಿಯ ಗಮನ ಸೆಳೆದರೆ ಪರಿಹಾರ ಕಾರ್ಯಕ್ಕಿಳಿಯಲು ಸುಲಭವಾಗಬಹುದು.
ನಮ್ಮ ಅರಿವಿಗೆ ನಿಲುಕಬಹುದಾದದ್ದರ ಜತೆಗೆ ನೀವು ಗುರುತಿಸಿಕೊಡುವ ಅಂಶಗಳನ್ನೂ ಅಳವಡಿಸಲು ನಾವು ಬದ್ಧ. ನಿಮ್ಮದೇ ಆಶಯ, ನಿಮ್ಮದೇ ನಿರೀಕ್ಷೆಗಳು. ನಾವು ಧ್ವನಿಯಷ್ಟೆ. ನಾವು-ನೀವು ಸೇರಿ ಮಂಡಿಸುವ ಹಕ್ಕೊತ್ತಾಯವನ್ನು ಖಂಡಿತಾ ಸರಕಾರ ಮಾನ್ಯ ಮಾಡಬೇಕು, ಮಾಡುತ್ತದೆ. ಜನಾಶಯವನ್ನು ಆಧರಿಸಿಯೇ ಸರಕಾರದ ಕಾರ್ಯಯೋಜನೆ ರೂಪುಗೊಳ್ಳಬೇಕು. ಆಗ ಮಾತ್ರ ಅಭಿವೃದ್ಧಿಗೊಂದು ಸ್ಪಷ್ಟ ದಿಕ್ಕು ದೊರೆಯಲು ಸಾಧ್ಯ. ಹಾಗಾದರಷ್ಟೇ ಸಮಸ್ಯೆಗಳಿಂದ ಕರಾವಳಿ ಮುಕ್ತವಾಗುತ್ತದೆ ಎಂಬ ನಂಬುಗೆ ನಮ್ಮದು.
`ಮುಂದೆ ಹೋಗೋಣ ಮಂಗಳೂರು' ಈ ಸಂಕಲ್ಪಕ್ಕೆ ನಿಮ್ಮದೇ ಉಕ್ತಿ, ನೀವೇ ಶಕ್ತಿ.
ಬನ್ನಿ ಜನಮುಖಿ ಈ ಆಂದೋಲನದೊಂದಿಗೆ ಸರಕಾರಕ್ಕೆ ನಮ್ಮ ಅಹವಾಲು ಸಲ್ಲಿಸೋಣ.
-ಸಂಪಾದಕ
ಶನಿವಾರ, ಅಕ್ಟೋಬರ್ 18, 2008
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ